ಕಸ್ತೂರಿ ಯಲ್ಲಿ ೨ ಹೊಸ ಧಾರಾವಾಹಿಗಳು
Posted date: 23 Thu, Apr 2015 – 08:31:33 AM

ಅಪ್ಪಟ ಕನ್ನಡದ ವಾಹಿನಿಯಾದ ಕಸ್ತೂರಿ ಚಾನಲ್ ಈಗ ವೈಟ್‌ಹಾರ್ಸ್ ನೆಟ್‌ವರ್ಕ್ ಸಹಯೋಗದೊಂದಿಗೆ ತನ್ನ  ವೀಕ್ಷಕರಿಗೆ ಹೊಸ ಹೊಸ ರೀತಿಯ  ಕಾರ್ಯಕ್ರಮಗಳು ಹಾಗೂ ಹೊಸ ಶೈಲಿಯ ಧಾರವಾಹಿಗಳನ್ನು ನೀಡುತ್ತಿದೆ.  ಈಗಾಗಲೇ ವಿನೂತನ ಕಾರ್ಯಕ್ರಮಗಳ ಮೂಲಕ ವೀಕ್ಷಕರ ಮನ ಗೆದ್ದಿರುವ ಈ ವಾಹಿನಿ ಇದೀಗ ಎರಡು ಹೊಸ ಶೈಲಿಯ ಧಾರವಾಹಿಗಳನ್ನು ಇದೇ ೨೭ ರ ಸೋಮವಾರದಿಂದ ಪ್ರಾರಂಭಿಸುತ್ತಿದೆ.  ಹಲವಾರು ಧಾರವಾಹಿಗಳಿಗೆ ನಿರ್ದೇಶನ ಹಾಗೂ ಛಾಯಾಗ್ರಹಣ ಮಾಡಿ ಗುರುತಿಸಿಕೊಂಡಿರುವ ಕೆ.ಶಶಿಧರ್ ನಿರ್ಮಾಣದ ನೀ ಹಚ್ಚಿನ ಕುಂಕುಮ ರಾತ್ರಿ ೭ ರಿಂದ ಪ್ರಸಾರವಾಗಲಿದೆ.  ಶಶಿಧರ್ ಅವರೇ ನಿರ್ದೇಶನ ಹಾಗೂ ಛಾಯಾಗ್ರಹಣ ಕೂಡ ಮಾಡಿರುವ ಈ ಧಾರಾವಾಹಿಗೆ ಕೇಶವ ಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಒದಗಿಸಿದ್ದಾರೆ.
ಸಮಾಜ ಸೇವೆಯನ್ನೇ ಗುರಿಯನ್ನಾಗಿಸಿಟ್ಟುಕೊಂಡಿರುವ ನಾಯಕ, ಬಡತನದಲ್ಲೇ ಹುಟ್ಟಿ ಬೆಳೆದ ನಾಯಕಿ ಇವರಿಬ್ಬರ ಮಧ್ಯೆ ಬರುವ ದುರಅಹಂಕಾರಿ ಹೆಣ್ಣು ಮೃದುಲ ಈ ಮೂವರ ನಡುವಿನ ಕಥೆಯನ್ನು ಹೊಂದಿರುವ ನೀ ಹಚ್ಚಿನ ಕುಂಕುಮದಲ್ಲಿ ರಶ್ಮಿ, ಐಶ್ವರ್ಯ, ಕಿರಣ್, ಅಶ್ವಿನ್, ಅಂಬುಜಾ, ಶಿಲ್ಪಾ ಪ್ರಮುಖ ತಾರಾಗಣದಲ್ಲಿದ್ದಾರೆ.  ಇಬ್ಬರು ನಾಯಕಿಯರ ಮಧ್ಯೆ ಪರಿತಪಿಸುವ ನಾಯಕ ಯಾರ ಹಣೆಗೆ ಕುಂಕುಮ ಹಚ್ಚುತ್ತಾನೆ ಎಂಬುದನ್ನು ಈ ಧಾರವಾಹಿಯ ಮುಖ್ಯ ಕಥಾ ಹಂದರವಾಗಿಟ್ಟುಕೊಳ್ಳಲಾಗಿದೆ.
ಈವರೆಗೆ ಹಲವಾರು ಯಶಸ್ವಿ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಆಶೋಕ ಕಶ್ಯಪ್ ಹಾಗೂ ರೇಖಾ ರಾಣಿ ದಂಪತಿಗಳ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಹೊಸ ಧಾರವಾಹಿ ಪ್ರೇಮಪಲ್ಲವಿ. ಈ ಧಾರಾವಾಹಿ ಇದೇ ೨೭ರಿಂದ ಪ್ರತೀ ದಿನ ರಾತ್ರಿ ೭.೩೦ ಕ್ಕೆ ಪ್ರಸಾರವಾಗಲಿದೆ. ರೇಖಾರಾಣಿ ಈಗಾಗಲೇ ಹಲವು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದು ಈಗ ಮತ್ತೊಂದು ಹೊಸ ಶೈಲಿಯ ಧಾರಾವಾಹಿಯನ್ನು ಕನ್ನಡ ಜನತೆಗೆ ನೀಡಲು ಮುಂದಾಗಿದ್ದಾರೆ.  ಹಳ್ಳಿ ಸೊಗಡಿನಲ್ಲಿ ನಡೆಯುವಂಥ ಕಥೆ ಇದಾಗಿದ್ದು ನಾಯಕಿ ಅಥವಾ ನಾಯಕಿಯ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡದೇ ಎಲ್ಲಾ ಪಾತ್ರಗಳಿಗೂ ಒಂದೇ ರೀತಿಯ ಮಹತ್ವ ಕೊಟ್ಟು ನಿರೂಪಿಸಿರುವ ನಿರ್ದೇಶಕಿ ರೇಖಾರಾಣಿಯವರು ತಮ್ಮ ಹಿಂದಿನ ಎಲ್ಲಾ ಧಾರಾವಾಹಿಗಳಿಗಿಂತ ವಿಶೇಷವಾಗಿ ಪ್ರೇಮಪಲ್ಲವಿ ಯನ್ನು ನಿರ್ದೇಶಿಸುತ್ತಿದ್ದಾರೆ.
ಈ ಧಾರಾವಾಹಿಗೆ ಇಬ್ಬರು ಸಂಚಿಕೆ ನಿರ್ದೇಶಕರಿದ್ದು ಮುಖ್ಯ ನಿರ್ದೇಶಕಿಯಾಗಿ ರೇಖಾರಾಣಿ ಕಾರ್ಯನಿರ್ವಹಿಸುತ್ತಿದ್ದಾರೆ.  ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿ ಕೂಡ ಇವರದಾಗಿದೆ.  ಹಲವಾರು ಧಾರಾವಾಹಿ ಮತ್ತು ನಾಟಕಗಳಲ್ಲಿ ಅಭಿನಯಿಸಿರುವ ಮಂಡ್ಯ ಜಯರಾಮ್, ಕವಿತಾ ರೈ, ನಾಗೇಂದ್ರ ಷಾ, ಶಶಿಕಲಾ ಉಳಿದ ತಾರಾಬಳಗದಲ್ಲಿದ್ದಾರೆ.  ಅಶೋಕ್ ಕಶ್ಯಪ್‌ರವರೇ ಛಾಯಾಗ್ರಹಣ ಕೆಲಸ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ಹೊಸ ರೀತಿಯ ಅಡುಗೆಯ ಕಾರ್ಯಕ್ರಮ, ಪ್ರಶ್ನೋತ್ತರ ಸೇರಿದಂತೆ ಹಲವಾರು ರಿಯಾಲಿಟಿ ಷೋಗಳನ್ನು ಕಸ್ತೂರಿಯಲ್ಲಿ ವೀಕ್ಷಿಸಬಹುದಾಗಿದೆ.  ಪತ್ರಿಕಾ ಗೋಷ್ಠಿಯಲ್ಲಿ ವೈಟ್‌ಹಾರ್ಸ್‌ನ ಮುಖ್ಯಸ್ಥ ಪಿ.ಕೈಲಾಸಂ, ಎ.ಶಿವಕುಮಾರ್ ಅಲ್ಲದೆ ಎರಡು ಧಾರಾವಾಹಿಗಳ ಕಲಾವಿದರು ತಂತ್ರಜ್ಞರೆಲ್ಲರೂ ಹಾಜರಿದ್ದರು.  


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed